ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

( ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಜಿಲ್ಲಾವಾರು ಅಥವಾ ಪ್ರಾಂತ್ಯಕ್ಕ್ಕೆ ಅನುಸಾರವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳ ಹಿಂದೆ ಕಾಣದ ಕೈಗಳ ಹಗಲಿರುಳಿನ ಪರಿಶ್ರಮ ಇದ್ದೆ ಇರುತ್ತದೆ. ಅದರಲ್ಲೂ ನಿರ್ದಿಷ್ಟ ಪಂಗಡದ ಅಥವಾ ಜಾತಿ ಮತ್ತು ಧರ್ಮದ ಬಗ್ಗೆ ನಡೆಯುವ ಸಮಾವೇಶಗಳಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಅಲ್ಲೊಂದು ಇಲ್ಲೊಂದು ತಿಳಿದು, ತಿಳಿಯದ ತಪ್ಪುಗಳು ಆಗುವುದು ಸಹಜವಾಗಿ ನಡೆಯುತ್ತದೆ. ತಿಳಿದು ನಡೆಯುವ ಮತ್ತು ಪೂರ್ವ ಯೋಜಿತ ತಪ್ಪುಗಳು ಕೂಡ ನಡೆಯಲು ಸಾಧ್ಯತೆ ಕೂಡ ಅಲ್ಲಗಳೆಯುವಂತೆ ಇಲ್ಲ. ಸಾಮಾನ್ಯವಾಗಿ ದೊಡ್ಡ ಸಮಾವೇಶದ ಪೂರ್ವ ತಯಾರಿ ಸರಿ ಸುಮಾರು 7 ರಿಂದ 8 ತಿಂಗಳು ಎಲ್ಲಾ ಸದಸ್ಯರು ತಮ್ಮ ಪರಿಶ್ರಮವನ್ನು ಹಾಕಿಕೊಳ್ಳುತ್ತಾ ಬರುತ್ತಾರೆ. ಸಮಾವೇಶ ಸಮೀಪಗೊಳ್ಳುತ ಆಯೋಜಕರ ಎದೆ ಬಡಿತ ಜಾಸ್ತಿ ಯಾಗುತ್ತ ಕಡಿಮೆಯಾಗುತ್ತಲು ಇರುತ್ತದೆ.



    ವೇದಿಕೆ, ಆಸನ, ದೀಪಾಲಂಕಾರ, ವಾಹನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಊಟ ಉಪಚಾರ ವ್ಯವಸ್ಥೆ, ವಾಹನ ನಿಲುಗಡೆಯ ವ್ಯವಸ್ಥೆ, ಮುಖ್ಯ ಅಥಿತಿ ಮತ್ತು ಸಮಾರಂಭದ ಪ್ರತೀ ಆಹ್ವಾನಿತ ವ್ಯಕ್ತಗಳನ್ನು ಗೌರವಿಸುವ ಮತ್ತು ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ದ ಎಲ್ಲಾ ತಯಾರಿ ಇಂತಹ ಅನೇಕ ಜವಾಬ್ದಾರಿಗಳು ಸದಸ್ಯರು ಮಾಡುತ್ತಲೆ ಇರುತ್ತಾರೆ.

         ಸಮಾಜಕ್ಕೆ ಒಳಿತನ್ನು ಮಾಡುವ ಯಾವುದೇ ಕೆಲಸ ಕಾರ್ಯವನ್ನು ಬೆಂಬಲಿಸಿ ಸಮಾವೇಶವನ್ನು ಜಯಗೊಳಿಸುವ ಮತ್ತು ಅದರಲ್ಲಿರುವ ಒಳಿತನ್ನು ಮಾತ್ರ ಉಪಯೋಗಿಸುವ ಚಾಕಚಖ್ಯತೆ ಪ್ರೇಕ್ಷಕರಲ್ಲಿ ಉಳಿದಿರುತ್ತದೆ. ಒಂದು ಮನೆ ಕಟ್ಟಿದರೂ, ಒಂದು ಹಾಡು ಹೇಳಿದರೂ, ಕಥೆ, ಕವನಗಳು ಬರೆದರೂ ಅಭಿಪ್ರಾಯಗಳು ಹತ್ತು ಹಲವಾರು ಇದ್ದೆ ಇರುತ್ತದೆ. ಹಾಗೆಯೇ ನಾವು ಮಾಡುವ ಕೆಲಸಕ್ಕೂ ನೂರಾರು ಜನರು, ಜಾಣರು ಪ್ರಶ್ನೆ ಉತ್ತರವನ್ನು ಮಾಡುವುದು ಕೂಡ ಸಹಜವಾಗಿ ನಡೆಯುತ್ತದೆ. ಹಾಗಾಗಿ ಆಯೋಜಕರು, ಪ್ರಾಯೋಜಕರು, ತನ್ನ ಸಂಪೂರ್ಣ ಶಕ್ತಿಯನ್ನು ಉಪಯೋಗಿಸಿ ಕಾರ್ಯಕ್ರಮ ನಡೆಸಲು ತಯಾರಿ ಮಾಡುತ್ತಾರೆ. 

     ಈ ಸಾರ್ವಜನಿಕ ಸಭೆ ಸಮಾರಂಭದಲ್ಲಿ ಒಳಗಿನ ತಿಕ್ಕಾಟ, ಮತ್ತು ಹೊರಗಿನ ತಿಕ್ಕಾಟ ಕೂಡ ಇರುತ್ತದೆ, ಅಲ್ಲೊಬ್ಬನಿಗೆ ನನಗೆ ಹೂ ಕೊಡಲಿಲ್ಲವೆಂದೂ, ಇಲ್ಲೊಬ್ಬನಿಗೆ ನನಗೆ ಆಸನ ಕೊಡಲಿಲ್ಲವೆಂದೂ, ಇನ್ನೊಬ್ಬ ನಾನೇ ಮೇಲು ನಾನು ಹೇಳಿದ್ದೆ ಆಗಬೇಕು ಅನ್ನುವುದು ಕೂಡ ಇರಬಹುದು. ಇವೆಲ್ಲರ ನಡುವೆ ಜವಾಬ್ದಾರಿಯುತ ಜನರು, ಜಾಣರು ಹತ್ತು ಹಲವು ಬಾರಿ ಯೋಚಿಸಿ, ಉತ್ತರ ಪ್ರತ್ಯುತ್ತರ ಕೊಡುತ್ತಾರೆ. ಪೈಪೋಟಿ ಸದಸ್ಯರಲ್ಲಿಯೂ, ಆಡಳಿತದಲ್ಲಿಯೂ ಅಥವಾ ಪ್ರೇಕ್ಷಕ ವರ್ಗದಲ್ಲಿಯೂ ಹುಟ್ಟಬಹುದು. ಮಾಡುವ ಕೆಲಸವು ಜನರಿಗೆ ಬಹಳಷ್ಟು ಉಪಯೋಗ ಆಗುವುದು ಎಂದಿದ್ದರೆ ಜನರನ್ನು ಕೂಡ ವ್ಯವಸ್ಥಿತ ವಾಗಿ ನೋಡಿಕೊಳ್ಳುವುದು ದೊಡ್ಡ ಜವಾಬ್ದಾರಿ ಆಗಿರುತ್ತದೆ.

       ಕೆಲವರು ಬೇಕು ಬೇಕೆಂದೆ ತೊಂದರೆಗಳನ್ನ ಕೊಡಲು ನೋಡಬಹುದು, ಇದರಲ್ಲಿ ಅಸೂಯೆ ಮತ್ತು ನಾನು ನಾನೆಂಬ ಪೈಪೋಟಿ ನಡೆದಲ್ಲಿ ತೊಂದರೆಗಳು ನಡೆಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಯಾವುದೇ ದೊಡ್ಡ ಕಾರ್ಯಕ್ರಮ ಮಾಡುವಾಗ ಹೆಚ್ಚಾಗಿ ತಾವು ನಂಬಿದ ದೈವ ದೇವರುಗಳ ಪ್ರಾರ್ಥನೆಯ ಮುಖಾಂತರ ನಡೆಯುವ ಸಂಗತಿಗಳು ಕೂಡ ಇರುತ್ತವೆ. ದೇವರೇ ನಾವು ಆಯೋಜಿಸಿದ ಈ ಸುಂದರವಾದ ಕಾರ್ಯಕ್ರಮಕ್ಕೆ ನಿನ್ನ ಆಶೀರ್ವಾದ ಇರಲಿ ನಮ್ಮ ಉದ್ದೇಶವನ್ನು ಜಯಗಳಿಸಿ ಕೊಡು ಎನ್ನುವ ಪ್ರಾರ್ಥನೆ ದೇವರಲ್ಲಿ ಮಾಡುತ್ತಾರೆ.

        ನಾಸ್ತಿಕರು ಅದೆಲ್ಲ ಏನಿಲ್ಲ ಹೇಳುತ್ತಾರೆ, ಭಕ್ತನು ಎಲ್ಲಾ ದೇವರೇ ಹೇಳುತ್ತಾನೆ, ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ವೇದಿಕೆಯ ಕೆಳಗೆ ನಡೆಯುವ ಎಲ್ಲಾ ಕಾರ್ಯ ಚಟುವಟಿಕೆ ಅತೀ ಜಾಗರುಕತೆ ಮತ್ತು ಜವಾಬ್ದಾರಿಯುತ ನಡೆಸಿದರೆ ಯಾವುದೇ ತೊಂದರೆಗಳು ಇಲ್ಲದೇ ಸಂಪೂರ್ಣಗೊಳ್ಳುತ್ತದೆ. ಹಾಗೆಯೇ ಸಂಘ ವನ್ನು ಕಟ್ಟುವವರು, ಸಂಘವನ್ನು ಬೆಳೆಸುವವರು ವಿವೇಕವನ್ನು ತಪ್ಪಿ ಹೋದಲ್ಲಿ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಕೂಡ ನಡೆದುಹೋಗುತ್ತದೆ. 

      ಸಮಸ್ಯೆಗಳು ನಡೆದಾಗ, ಎಲ್ಲರೂ ಏಕ ಮನಸಿಸ್ಸಿನಿಂದ ಒಗ್ಗೂಡಿ ಇನ್ನಷ್ಟು ಬಲಗೊಂಡು ಆಗಿರುವ ಸಂಧರ್ಭವನ್ನು ನಾಜುಕಾಗಿ ನೋಡಿಕೊಳ್ಳುವ ಜವಾಬ್ದಾರಿ ಅವರದ್ದು ಆಗಿರುತ್ತದೆ. ಉದಾಹರಣೆಗೆ, ಏನಪ್ಪಾ ಬಾರಿ ಮಾತಾಡುತ್ತೀಯಾ ನಿನಗೆ ಸುಮ್ಮನೆ ಇರಲು ಆಗುವುದಿಲ್ಲವೇ? ಎಂದು ಒಬ್ಬ ಕೇಳಿದರೆ ಅದಕ್ಕೆ ಎದುರಾಗಿ ನೀನ್ಯಾರಪ್ಪ ನನಗೆ ಹೇಳುವುದಕ್ಕೆ ಅನ್ನುವುದರಿಂದಲೇ ಆರಂಭ ಆಗುತ್ತದೆ. ಮಾತಿಗೆ ಮಾತು ಬೆಳೆದು ವಿವೇಕವನ್ನು ಕಳೆದುಕೊಳ್ಳುವ ಸಂಧರ್ಭಗಳು ಕೂಡ ನಡೆಯುವ ಸಾಧ್ಯತೆ ಇರುತ್ತದೆ.

      ಎಲ್ಲೋ ನಿದ್ದೆ ಮಾಡುತ್ತಿರುವವರು ಒಮ್ಮೆಲೇ ಏಳುತ್ತಾರೆ, ಏನು ಸಿಗುತ್ತದೆ ಎಂದು ಕಾಯುತ್ತಿರುವವರು ಇರುತ್ತಾರೆ, ನಮ್ಮವರು ಎಂಬ, ಅಥವಾ ನಾವೆಲ್ಲರೂ ಒಂದೇ,  ಮನುಷ್ಯರು ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ, ಎಂಬ ಮನೋಭಾವನೆ ಉಳ್ಳವರು ಶಾಂತಿಯನ್ನು ಕಾಪಾಡಲು ಯತ್ನಿಸುತ್ತಾರೆ. ಅಲ್ಪ ಜಾಣರು ಯಾರನ್ನು ಹೇಗೆ ತಿನ್ನುವುದು ಎಂಬುದನ್ನು ನೋಡುತ್ತಲೇ ಇರುತ್ತಾರೆ. 

     ಇಂದಿನ ದಿನಗಳಲ್ಲಿ, ಮಾತಾಡಿದರು ತಪ್ಪು, ಮಾತನ್ನ ಆಡದಿದ್ದರೂ ತಪ್ಪು, ಎದ್ದರು ತಪ್ಪು, ಕುಳಿತರೂ ತಪ್ಪು, ಒಟ್ಟಾರೆ ಒಂದು ಕಾಲದಲ್ಲಿ ಸತ್ಯವಾದವಿತ್ತು, ಇಂದು ಸತ್ಯವಾದ ಇಲ್ಲ, ಆಸೆಗಳ ನಡುವೆ, ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುವ ಪ್ರಪಂಚದಲ್ಲಿ ಬೆಳೆಯುತ್ತಿದ್ದೇವೆ. ಕಾಲಯೇ ತಸ್ಮೈ ನಮಃ.

                        ✍️ಮಾಧವ. ಕೆ. ಅಂಜಾರು.

Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ,