(ಲೇಖನ -105)ಅದೆಷ್ಟು ಜಾಗರೂಕರಾಗಿ ನಡೆಸಿದ ಮದುವೆ ಕೂಡ ಒಂದೆರಡು ತಿಂಗಳಲ್ಲಿ ವಿಚ್ಚೇದನ ಆಗಿರುವ ನಿದರ್ಶನ ಅತಿಯಾಗಿ ಇದೆ, ಯಾವುದೇ ಜಾತಕ ಆಡಂಬರವಿಲ್ಲದೆ ನಡೆಸಿದ ಮದುವೆ ದೀರ್ಘ ಕಾಲ ಉಳಿದ ಉದಾಹರಣೆ ಕೂಡ ಇವೆ.

(ಲೇಖನ -105), ಮದುವೆಯ ವಯಸ್ಸಿಗೆ ಬಂದ ಗಂಡು, ಕಾಣುವ ಕನಸುಗಳು ಸಾವಿರಾರು, ನಾನು ಮದುವೆ ಯಾಗುವ ಹೆಣ್ಣು ಸಿರಿವಂತಳು, ಸುಂದರಿಯಾಗಿರಬೇಕು, ಅವಳ ಕಣ್ಣುಗಳು ಜಿಂಕೆಯ ಕಣ್ಣಿನಂತೆ ಇರಬೇಕು, ಮೈಕಟ್ಟು ಬೇಲೂರ ಶಿ ಲಾಬಾಲಿಕೆಯಂತಿರಬೇಕು, ಬೆಳಗ್ಗಿನಿಂದಲೂ ರಾತ್ರಿಯವರೆಗೂ ಮುದ್ದಾಡಿ ನನ್ನ ಪ್ರತೀ ಆಸೆಯನ್ನು ಈಡೇರಿಸುವಂತೆ ಇರಬೇಕು, ನಾನು ಹೇಳಿದ್ದನೆಲ್ಲ ಕೇಳಿ ನನ್ನ ಸೇವೆಯನ್ನು ಮಾಡಬೇಕು ಹೀಗೆ ಹತ್ತು ಹಲವು ಕನಸುಗಳ ಪಟ್ಟಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ವಧು ವರರು,



   ಹೆಣ್ಣುಮಕ್ಕಳ ಕನಸುಗಳು, ನನ್ನ ಜೀವನ ಸಂಗಾತಿ ನನ್ನ ಮಾತನ್ನು ಕೇಳಿ ನನ್ನನ್ನು ಪ್ರೀತಿಯಿಂದ ನೋಡಬೇಕು, ನನಗೆ ಬೇಕಾದ ಬಂಗಾರ, ಹಣ, ಕಾರು, ಬಂಗಲೆ ಎಲ್ಲವನ್ನೂ ಹೊಂದಿರಬೇಕು, ನನ್ನ ಮೊಗದಲ್ಲಿ ನಗು ಬರಿಸುವ, ಸುಂದರ ಮೈಕಟ್ಟು, ಒಳ್ಳೆಯ ಬುದ್ದಿ, ವಿದ್ಯಾವಂತನು ಆಗಿರಬೇಕು, ನನ್ನನ್ನು ಗೌರವಿಸಿ ರಾಣಿಯಂತೆ ನೋಡಿಕೊಳ್ಳುವವನಾಗಿರಬೇಕು. ಸ್ವಂತ ಮನೆ ಹೊಂದಿರಬೇಕು, ಹೀಗೆ ವಿವಿಧ ತರಹದ ಬೇಕುಗಳ ಪಟ್ಟಿಯಿಂದ ಜೀವನ ಸಂಗಾತಿಯನ್ನು ಹುಡುಕುತ್ತಾರೆ ಮತ್ತು ಮದುವೆ ಮಾಡಿಕೊಳ್ಳುತ್ತಾರೆ.

ಇನ್ನು ಕೆಲವರು ದುಷ್ಟ ಚಟಗಳಿಲ್ಲದೆ ಇದ್ದರೆ ಸಾಕು, ಇನ್ನೊಬ್ಬರ ಸಹವಾಸ ಮಾಡದೇ ಇದ್ದರೆ ಸಾಕು, ಆರೋಗ್ಯ, ನಮ್ಮ ಕುಟುಂಬ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಂಗಾತಿ ಸಿಕ್ಕಿದರೆ ಸಾಕು. ಆಸೆಗಳ ಪಟ್ಟಿಯಲ್ಲಿ ತನ್ನನ್ನು ದೂರವಿಟ್ಟು ನಗುವಿನ ಸಂಸಾರ ನಮ್ಮದಾಗಿರಲಿ ಎಂದು ಬಯಕುವ ಅನೇಕ ಜನರು. ಇಲ್ಲಿ ಯಾವುದನ್ನೂ ನಮ್ಮ ನಿರ್ಧಾರ ಅಥವಾ ಆಸೆಗಳಿಗೆ ತಕ್ಕಂತೆ ಸಿಗುವ ಅಥವಾ ನಮ್ಮ ಕನಸುಗಳಿಗೆ ತಕ್ಕ ಸಿಗುವ ಸಂಗಾತಿ ಶೇಕಡಾ 99 ಮಂದಿಗೆ ಇಲ್ಲವೆಂದು ಹೇಳಬಹುದು. ಜೀವನ ನಾವುಗಳು ಬಯಸಿದಂತೆ ಸಿಗುವುದು ಬಹಳಷ್ಟು ವಿರಳ ಮತ್ತು ಬಯಸಿದ್ದು ಸಿಗಬೇಕಾದರೆ ಎಲ್ಲಾ ರೀತಿಯ ಪ್ರಯತ್ನ ಬಹಳಷ್ಟು ಎಚ್ಚರಿಕೆಯಿಂದ ಹೊಂದಿರಬೇಕು.

    ಜೀವನದಲ್ಲಿ ನಡೆಯುವ ಪ್ರತಿಯೊಂದು ಪ್ರಮುಖ ಘಟ್ಟಗಳು ಓದು, ಮದುವೆ, ಮತ್ತು ನಮ್ಮ ಗುರಿಯನ್ನು ತಲುಪಲು ನಾವು ಮಾಡುವ ಪ್ರಯತ್ನಗಳು ಸಂಪೂರ್ಣವಾಗಿ ಸಿಗುತ್ತವೆ ಅನ್ನುವುದು ನಮಗೆ ತಿಳಿದಿರುವುದಿಲ್ಲ. ನಾವುಗಳು ಬಯಸಿದ ಅಥವಾ ಕನಸುಗಳು ನನಸಾಗದೆ ಇರುವ ಸಾಧ್ಯತೆಗಳು ಬಹಳಷ್ಟು ಇರುತ್ತವೆ. ಮದುವೆಯ ಸಮಯದಲ್ಲಿ ಹಿಂದಿನ ಕಾಲದಲ್ಲಿ ಅನುಭವಸ್ತ ಹಿರಿಯರಲ್ಲಿ ಮಾರ್ಗದರ್ಶನ ಪಡೆದು ಹೆಣ್ಣು ಮತ್ತು ಗಂಡಿನ ಮನೆಯ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಕಲೆ ಹಾಕಿ ಈ ಹೆಣ್ಣು ಈ ಗಂಡಿಗೆ ಸಮಾನದದ್ದು ಎಂದು ನಿರ್ಧರಿಸಿ ಮದುವೆ ಮಾಡುತಿದ್ದರು. ಅದಲ್ಲದೆ ಹೆಣ್ಣು ಮತ್ತು ಗಂಡಿನ ಮನಸ್ಥಿತಿಯ ತುಲನೆ ಮಾಡಿ ಎತ್ತರ, ಗುಣ, ನಡತೆ, ಸೌಂದರ್ಯವನ್ನು ಸರಿದೂಗಿಸಿ ಹೆಣ್ಣು ಮತ್ತು ಗಂಡಿನ ಮದುವೆ ನಿರ್ಧಾರಕ್ಕೆ ಅಣಿಯಾಗುತ್ತಿದ್ದ ಕಾಲ. ಹಿಂದೂ ಸಂಪ್ರದಾಯದ ಪ್ರಕಾರ, ಜಾತಕದ ತುಲನೆ, ದೇವಸ್ಥಾನದಲ್ಲಿ ಹಿರಿಯರ ಸಹಾಯದೊಂದಿಗೆ ಹೂ ಹಾಕಿ ದೇವರ ಅಪ್ಪಣೆಯನ್ನು ಪಡೆದು ಭರವಸೆಯಿಂದ ಮದುವೆ ಮಾಡಿಸಿದ ಉದಾಹರಣೆಗಳು ಇದೆ. ಒಂದು ಮದುವೆ ಮಾಡಲು ಮತ್ತು ಮದುವೆ ಆಗಲು ಸಾವಿರ ಬಾರಿ ಯೋಚಿಸಿ ಆಗಬೇಕು ತಮ್ಮ ಸಂಗಾತಿಯ  ಆಯ್ಕೆಯ ಸಂಧರ್ಭ ಬಹಳಷ್ಟು ಜಾಗ್ರತೆ ವಹಿಸಬೇಕು ಇಲ್ಲವಾದಲ್ಲಿ ವೈವಾಹಿಕ ಜೀವನ ಕಲ್ಲು - ಕಡಲೆ ಆಗಬಹುದು ಅನ್ನುವುದು ತಿಳಿದವರ ಮಾತುಗಳು.

       ಅದೆಷ್ಟು ಜಾಗರೂಕರಾಗಿ ನಡೆಸಿದ ಮದುವೆ ಕೂಡ ಒಂದೆರಡು ತಿಂಗಳಲ್ಲಿ ವಿಚ್ಚೇದನ ಆಗಿರುವ ನಿದರ್ಶನ ಅತಿಯಾಗಿ ಇದೆ, ಯಾವುದೇ ಜಾತಕ ಆಡಂಬರವಿಲ್ಲದೆ ನಡೆಸಿದ ಮದುವೆ ದೀರ್ಘ ಕಾಲ ಉಳಿದ ಉದಾಹರಣೆ ಕೂಡ ಇವೆ. ಪ್ರೀತಿ ಪ್ರೇಮ ಪ್ರಕರಣದಲ್ಲಿ ಮದುವೆಯಾಗಿ ಉಳಿದಿರುವ ಮತ್ತು ಅಳಿದಿರುವ ಸಂಬಂಧ ಗಳೂ ಕೂಡ ನಮ್ಮ ಸುತ್ತಲೂ ಇದೆ. ಇವೆಲ್ಲವೂ ನಮ್ಮ ಜೀವನದಲ್ಲಿ ಬಹಳ ಹತ್ತಿರದಿಂದ ಕಾಣುತ್ತಲೇ ಇದ್ದೇವೆ. ಹಾಗಾದರೆ ಮದುವೆ ಅಂದರೆ ಏನು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ದೇಶದಲ್ಲಿ ನೂರು ಮದುವೆಗೆ ನೂರ ಇಪ್ಪತ್ತು ವಿಚ್ಚೆದನೆ, ಭಾರತದಲ್ಲಿ ಕೂಡ ವೈವಾಹಿಕ ಜೀವನಕ್ಕೆ ಅರ್ಧ ದಾರಿಯಲ್ಲಿ ಅಂತ್ಯ ಹಾಡುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾನೆ ಇದೆ. ಬದುಕಿನಲ್ಲಿ ಅನ್ಯರನ್ನು ನೋಡಿ ನಮ್ಮ ಸಂಸಾರ ಅವರಂತೆ ಇಲ್ಲ, ಅವಳು ಅವನು ನನ್ನ ಬದುಕಿನಲ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು ಎಂದು ಹೇಳುತ್ತಾ ಜೀವನ ಪೂರ್ತಿ ಕನಸುಕಾಣುತ್ತ ಹೆಸರಿಗೆ ಮಾತ್ರ ಗಂಡ ಹೆಂಡತಿಯಾಗಿ ಬದುಕು ಸಾಗಿಸುವ ಅನೇಕ ಜನರು ಬಲವಂತವಾಗಿ ಜೀವನ ಮಾಡುತ್ತಿದ್ದಾರೆ ಸಮಾಜಕ್ಕಾಗಿ. ಇಂತವರು ಯಾರದ್ದೋ ಬಲವಂತಕ್ಕಾಗಿ ಅಥವಾ ತನ್ನ ಬೇಜವಾಬ್ದಾರಿ ಮನಸ್ಥಿತಿಯನ್ನು ಹೊಂದಿರುವ ಅಥವಾ ಬರೇ ಹೆಸರಿಗೆ ಮಾತ್ರ ಮದುವೆ ಆಗುವ ಜನರು ಕೂಡ ಇರಬಹದು. ಹೆಣ್ಣು ಮತ್ತು ಗಂಡು ಮದುವೆಯ ನಂತರ ಹೊಂದಾಣಿಕೆಯನ್ನು ಬಯಸದೆ, ಬದುಕಿನ ಏರಿಳಿತವನ್ನು ಸ್ವೀಕರಿಸದೆ ತಾನು ಸತ್ಯವಂತ ಅಥವಾ ಸತ್ಯವಂತೆ ಅನ್ನುವ ಭಾವನೆಗೆ ಒಳಗಾಗಿ, ಸಂಸಾರದ ವಿಷಯವನ್ನು ಹುಳಿ ಹಿಂಡುವವರ ಜೊತೆಗೂಡಿ ಅಭಿಪ್ರಾಯ ತೆಗೆದುಕೊಂಡು ಬೇಗನೆ ಅವನತಿ ಹೊಂದುವವರು ಜಾಸ್ತಿಯಾಗಿರುತ್ತಾರೆ.

       ಸಂಸಾರದ ಸಮಸ್ಯೆಗಳು ಎಲ್ಲರಲ್ಲೂ ಬರುತ್ತದೆ, ಒಂದಲ್ಲ ಒಂದು ರೀತಿ, ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ತಾವಗಿಯೇ ಸೃಷ್ಟಿಸಿಕೊಂಡು ತನ್ನ ಜೀವನವನ್ನು ಸರಿದಾರಿಯಲ್ಲಿ ಕೊಂಡುಹೊಗಲು ಸರಿಯಾದ ಮಾರ್ಗದರ್ಶನ ಕೊಡುವ ಜನರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ವಿಚ್ಚೇಧನೆಯ ಬದಲು ಸರಿ ದಾರಿಗೆ ಬರಬಹುದು ಇಲ್ಲವಾದಲ್ಲಿ ಬಹಳ ಬೇಗನೆ ಸಂಬಂಧ ಕಡಿದುಕೊಳ್ಳಬಹದು. ಜೀವನದಲ್ಲಿ ಹೊಂದಾಣಿಕೆ ಬಯಸದೆ ಇರುವವರು ಮತ್ತು ಸಮಸ್ಯೆ ಎದುರಿಸದೆ ಇರಲಿಚ್ಚಿಸುವವರು, ಬೇಜವಾಬ್ದಾರಿ ಇರುವವರು, ಸಂಸಾರ ನಡೆಸಲು ಇಷ್ಟವಿಲ್ಲದೆ ಇರುವವರು ಮದುವೆ ಅನ್ನುವ ಘಟ್ಟಕ್ಕೆ ಕಾಲಿಡಬಾರದು. ಮದುವೆಯಾದ ಮೇಲೆ ತನ್ನ ಹಳೆಯ ನೆನಪುಗಳ ಸುತ್ತ ತಿರುಗುತ್ತಾ ನಾನು ಮದುವೆ ಆಗಬಾರದಿತ್ತು ಎನ್ನುವ ಅವಿವೇಕಿಗಳು ಕೂಡ ಮದುವೆ ಆಗಬಾರದು. ಮದುವೆ ಅನ್ನುವುದು ಏಳು ಜನುಮಗಳ ಅನುಬಂಧ ನಾವಿಡುವ ಪ್ರತೀ ಹೆಜ್ಜೆಗಳು ಮಾತುಗಳು ಅತೀ ಜಾಗರೂಕತೆಯಿಂದ ಕೂಡಿ ರ ಬೇಕು,  ಪ್ರೀತಿ, ವಾತ್ಸಲ್ಯ, ಎಲ್ಲವನ್ನು ಸರಿಯಾಗಿ ತೂಗಿ ನಡೆಸಿಕೊಂಡು, ಸಂಸಾರವೆಂಬ ಸಾಗರದಲ್ಲಿ ಸುಖವಾಗಿ ಬದುಕಲು ಸಾಧ್ಯ. ಇಲ್ಲವಾದಲ್ಲಿ ಕುಟುಂಬ, ಸಮಾಜ, ಗೆಳೆಯ ಗೆಳತಿ ಎಲ್ಲವನ್ನು ಅವನತಿ ಹೊಂದುವ ಉದಾಹರಣೆ ಕೂಡ ಇದೆ.

      ವಿಚ್ಚೆದನೆಗೆ ಬಲವಾದ ಕಾರಣಗಳು ಇದ್ದಾಗ ಸರಿಪಡಿಸಲು ಸಾಕಷ್ಟು ಅವಕಾಶಗಳನ್ನು ಕೊಡಿ, ಉತ್ತಮ ಜನರಲ್ಲಿ ಮಾತ್ರ ಮಾರ್ಗದರ್ಶನ ಪಡೆದುಕೊಳ್ಳಿ, ನಿರ್ಧಾರವನ್ನು ತೆಗೆದುಕೊಳ್ಳುವ ಸಂಧರ್ಭ ಬಂದಾಗ ಸಾವಿರಾರು ಬಾರಿ ಯೋಚಿಸಿ. ಅತೀ ಹೆಚ್ಚಿನ ಅವಕಾಶಗಳನ್ನು ಕೊಟ್ಟು ಸರಿ ದಾರಿಗೆ ಬರುವ ಸಂಕೇತ ಇಲ್ಲದೇ ಹೋದಲ್ಲಿ ಸಂಬಂಧವನ್ನು ಬಿಡುವುದೇ ಉತ್ತಮಗಿರುತ್ತದೆ. ಗಂಡು ತನ್ನ ಹೆಂಡತಿಯಿಂದ ಗೌರವ ಬಯಸುತ್ತಾನೆ, ಹೆಣ್ಣು ತನ್ನ ಗಂಡನಿಂದ ನಿಜವಾದ ಪ್ರೀತಿ ಬಯಸುತ್ತಾಳೆ. ನಾಟಕೀಯವಾಗಿ ಬದುಕು ನಡೆಸುವ ಸಂಸಾರಸ್ಥರ ಸಂಸಾರ ಸುಖವಾಗಿ ಇರಲು ಸಾಧ್ಯವಿಲ್ಲ. ಎಲ್ಲದಕ್ಕೂ ಹೆಚ್ಚಾಗಿ ತಪ್ಪುಗಳನ್ನು ಮನ್ನಿಸಿ ಮುಂದುವರೆಯುವ ಮನಸ್ಥಿತಿ ಹೊಂದಿದ್ದಾಗ ಬದುಕು ಮುನ್ನಡೆಯಬಹುದು.

       ಒಂದು ವಿಷಯ ನಾವು ತಿಳಿದಿರಲೇಬೇಕು, ಚಲನಚಿತ್ರದಲ್ಲಿ ತೋರಿಸುವ ಪ್ರೀತಿ ನಿಜ ಜೀವನದಲ್ಲಿ ಇದ್ದರೂ ಅದಕ್ಕೆ ಸಂಗೀತ ರಸಮಂಜರಿ ಹಾಡುವವರು ಇರುವುದಿಲ್ಲ, ಪ್ರೀತಿ ನಿಜವಾಗಿದ್ದರೂ ನಮಗೆ ತಿಳಿಯುವಷ್ಟು ಶಕ್ತಿ ಕೂಡ ಕೆಲವರಲ್ಲಿ ಇರುವುದೇ ಇಲ್ಲ. ಲಕ್ಷ ಕೊಟ್ಟು ಕೋಟಿ ಕೊಟ್ಟು ಮದುವೆ ಆದವರು, ಮದುವೆ ಮಾಡಿದವರು ಅಹಂಕಾರ ಇರದೇ ಇದ್ದರೆ ಚೆನ್ನಾಗಿ ಬದುಕು ನಡೆಸುತ್ತಾರೆ. ಏನೂ ಕೊಂಡು ಕೊಳ್ಳದೆ ಮದುವೆಯಾದವರು ಕೂಡ ಅಹಂಕಾರ ಇರದೇ ಇದ್ದರೆ ಬದುಕು ಸ್ವೀಕರಿಸುತ್ತಾರೆ. ಒಟ್ಟಾರೆ ನಾನು, ನನ್ನದು, ನನಗಾಗಿ ಇಷ್ಟೇ ಪ್ರಪಂಚ, ನಮಗೆ ಅವರಿಂದ ಏನು ಪ್ರಯೋಜನ ಎಂದು ಹೇಳುತ್ತಾ ಎಲ್ಲವನ್ನೂ ದೂರ ಮಾಡುವವರಿಗೆ ಮದುವೆಯ ನಂತರದ ಬದುಕಿನಲ್ಲಿ ಕಷ್ಟಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ.

     ಕೂಡಿ ಬಾಳುವವರು ಉತ್ತಮರು, ಎಲ್ಲವೂ ಇದ್ದು ಬೇಡಿ ಬಾಳುವವರು ಜಿಪುಣರು. ಅನ್ಯರ ನೋಡಿ ಅಸೂಯೆ ಪಡುವವರು ಕೈಲಾಗದವರು ಮತ್ತು ಅಪಾಯಕಾರಿ.

           ✍️ಮಾಧವ. ಕೆ. ಅಂಜಾರು.








  

Comments

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ