(ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು...

 (ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು....



      ಪ್ರತಿಯೊಂದು ಜೀವಿಗಳು ಅದರದ್ದೇ ಆದ ಸಮಸ್ಯೆಗೆ ಸಿಕ್ಕಿಕೊಂಡು ಬದುಕುತ್ತವೆ, ಸಮಸ್ಯೆಗಳಿಲ್ಲದ ಜೀವಿಗಳಿಲ್ಲ, ಮನುಷ್ಯನಿಗೆ ಬುದ್ದಿ ಜಾಸ್ತಿಯಾದುದರಿಂದ ಅವನಿಗೆ ಸಮಸ್ಯೆಗಳ ಸರಮಾಲೆ ಹುಟ್ಟುತ್ತಲೇ ಇರುತ್ತದೆ. ಇಂದಿನ ದಿನಗಳಲ್ಲಿ ಯಾರಲ್ಲಿ ವಿಚಾರಿಸಿದರೂ, ಸಂತೋಷದ ಬದುಕಿಲ್ಲ ಅನ್ನುವ ಮಾತುಗಳನ್ನು ಕೇಳಿರಬಹುದು. ಒಂದಲ್ಲ ಒಂದು ರೀತಿಯ ತೊಂದರೆಯಲ್ಲಿ ಸಿಕ್ಕಿಕೊಂಡು ನಿರಾಸೆಯ ಜೀವನ ಮಾಡುವ ಜನರು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದಾರೆ! ಆಕಸ್ಮಿಕವಾಗಿ ಬರುವ         ಆರೋಗ್ಯ ಸಮಸ್ಯೆಗೆ ಒಳಗಾದ ವ್ಯಕ್ತಿ ಒಮ್ಮೆ ನನಗೆ ಆರೋಗ್ಯ ಸರಿಯಾಗಿ ಇದ್ದರೆ ಸಾಕು ಬೇರೇನೂ ಬೇಡವೆಂದು ಪ್ರಾರ್ಥಿಸಿದರೆ. ಎಲ್ಲವೂ ಸುಸ್ಥಿತಿಯಲ್ಲಿದ್ದು ನನ್ನ ಗಂಡ ಸರಿಯಿಲ್ಲ, ನನ್ನ ಹೆಂಡತಿ ಸರಿಯಿಲ್ಲ, ನನ್ನ ಮಕ್ಕಳು ಸರಿಯಿಲ್ಲ , ನನ್ನ ಕುಟುಂಬದ ಜನರೇ ಸರಿಯಾಗಿಲ್ಲ ಎಂಬ ಪಟ್ಟಿಯನ್ನು ಹೊರಗೆ ಹಾಕುತಿರುತ್ತಾರೆ. ಕೆಲವೊಂದು ಸರಿಯಾಗಿದ್ದರೂ ಯಾರಿಗೂ ಹೇಳಲಾಗದ ಪರಿಸ್ಥಿತಿ. ಹೌದು ನಿಜವಾದ ಸಮಸ್ಯೆಗಳಿಗೆ ಒಳಗಾದವರು ಯಾರಿಗೂ ಹೇಳದೆ ಮನದೊಳಗೆ ಕೊರಗುತ್ತಾ ಬದುಕುತಿರುತ್ತಾರೆ.

       ಜೀವದ ಪ್ರತಿಯೊಂದು ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿರುವ ಜನರಿಗೆ ಈ ತರದ ಸಮಸ್ಯೆಗಳು ಇರುತ್ತವೆ , ಅನ್ಯ ಮಹಿಳೆಯ ಸೆರಗು ಹಿಡಿದು ಸಿಕ್ಕಿಬಿದ್ದಾಗ ಸಮಸ್ಯೆ,  ಅನ್ಯ ಪುರುಷ ನ ದೇಹದಾಸೆಗೆ ಬಿದ್ದು ಸಮಾಜಕ್ಕೆ ತಿಳಿದಾಗಿನ ಸಮಸ್ಯೆ, ಇನ್ನೊಬ್ಬರಿಗೆ ತೊಂದರೆಗೊಳಿಸಲು ಹೋಗಿ ತಾನೇ ಸಿಕ್ಕಿಬಿದ್ದಾಗಿನ ಸಮಸ್ಯೆ, ಹಣದಾಸೆಗಾಗಿ ನೀಚ ಕೃತ್ಯಕ್ಕಿಳಿದು ಗಳಿಸಿದ ಹಣ ತಿನ್ನಲೂ ಆಗದೆ ನೆಲಕಚ್ಚಿದಾಗಿನ ಸಮಸ್ಯೆ ಹೀಗೆ ಅನೇಕ ತರಹದ ಕಾರಣಗಳು. ಅತೀ ಆಸೆಯಿಂದ ನ್ಯಾಯ, ನೀತಿ, ಧರ್ಮಗಳ ಪರಿಪಾಲನೆ ಇಲ್ಲದೆ ಮನ  ತೋಚಿದಂತೆ ವರ್ತಿಸಿ ಹೀನಾಯ ಸ್ಥಿತಿಗೆ ತಲುಪಿದಾಗಿನ ಸಮಸ್ಯೆ ಮುಂತಾದವು.

      ಸಂಬಂಧಗಳಿಗೆ ಬೆಲೆ  ಕೊಡದೆ , ಕಣ್ಣಿದ್ದೂ ಕುರುಡನಂತೆ ಬದುಕುತ್ತಾ, ಮಾಡುವ ಕೆಲವು ಕುಕೃತ್ಯಗಳು, ಓದುವುದು ಶಾಸ್ತ್ರ ಇಕ್ಕುವುದು ಗಾಳ ಎನ್ನುವಂತೆ, ಸರಿಯಾಗಿರುವ ಕುಟುಂಬಗಳ ನಡುವೆ ಹುಳಿ ಹಿಂಡುವ ಜನರು, ಕೆಲಸಮಾಡುವ ಸ್ಥಳದಲ್ಲಿ ಪ್ರಾಮಾಣಿಕತೆ ಇಲ್ಲದೇ ಅತಿಯಾದ ನಾಟಕವಾಡುವ ಕೆಲಸಗಾರ, ಸುಂದರ ಹೆಣ್ಣಿನ, ಗಂಡಿನ ಮೋಸದ ಬಲೆಗೆ ಬಿದ್ದು ಲಕ್ಷನುಗಟ್ಟಲೆ ದುಡ್ಡನ್ನು ಕಳೆದುಕೊಳ್ಳುವ ಜನರು. ಅಮಾಯಕ ಗಂಡನ ವ್ಯಕ್ತಿತ್ವ ದುರುಪಯೋಗ ಮಾಡಿ ಅನ್ಯ ಪುರುಷನ ಸಂಬಂಧವಿಟ್ಟುಕೊಳ್ಳುವ ಮಹಿಳೆ, ಮಡದಿಗೆ ವಂಚಿಸಿ ಊರು ಮೇಯುವ ಪುರುಷ,  ಇದಕ್ಕೆಲ್ಲಾ ಸಾವಿರಾರು ಕಾರಣಗಳಿದ್ದರೂ,  ಕೆಲವರು ಅನಿವಾರ್ಯತೆಯಿಂದ ಇಂತಹ ದಾರಿ ಹಿಡಿದರೆ, ಕೆಲವರು ಚಟ ವಾಗಿಟ್ಟುಕೊಂಡು ಮಾಡುತ್ತಿರುತ್ತಾರೆ.

      ಯಾವುದೇ ಹೆಣ್ಣು, ಗಂಡು ವಯಸ್ಸುಗಳ ಇತಿಮಿತಿ ಇಲ್ಲದೆ ಆಕರ್ಷಿತಗೊಳ್ಳಬಹುದು, ಸಹಜವೂ ಕೂಡ ಆದರೆ, ಅದನ್ನೇ ಪ್ರವೃತ್ತಿಯಾಗಿ ಇನ್ನೊಬ್ಬರನ್ನು ಬಳಸಲು ನೋಡುವ ಜನರ ಬಲೆಗೆ ಬಿದ್ದರೆ ಅದರಿಂದ ಬಿಡಿಸಿಕೊಳ್ಳುವುದು ಸುಲಭದ ಮಾತಲ್ಲ, ಆರಂಭ ಸಂತೋಷ ತಂದುಕೊಟ್ಟರೂ ಅಂತ್ಯ ಹೀನಾಯ ಬದುಕಿನತ್ತ ದೂಡಿಬಿಡುತ್ತದೆ. ಕೊನೆಗೆ ಕಟ್ಟಿಕೊಂಡವಳು, ಕಟ್ಟಿಕೊಂಡವನು ಇಬ್ಬರೂ ಪ್ರಪಾತಕ್ಕೆ ಬಿದ್ದು ಕೊನೆಯಾಗುವ ನಿದರ್ಶನಗಳು ಅದೆಷ್ಟು.....

"ಭಾರತದ ಅನುರಾಗ " ವಿಕೃತಿ ಮೆರೆಯುವ ಜನರ ಬಗ್ಗೆ ಜಾಗೃತಿಯಾಗಿರಬೇಕು ಅನ್ನುವ ಮಾಹಿತಿಯೊಂದಿಗೆ.

ಬರಹ :ಮಾಧವ. ಕೆ. ಅಂಜಾರು 








          

    

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.