(ಲೇಖನ -20)ದುಷ್ಟರ ಸಾಮ್ರಾಜ್ಯದಲ್ಲಿ ಶಿಸ್ತಿನ ಸಿಪಾಯಿ!

ದುಷ್ಟರ ಸಾಮ್ರಾಜದಲ್ಲಿ ಶಿಸ್ತಿನ ಸಿಪಾಯಿ,

ತಾಳು ಮನವೇ ತಾಳು ನೀನೊಬ್ಬ ಶಿಸ್ತಿನ ಸಿಪಾಯಿ, ನಿನಗೇನು ಕಷ್ಟ ಬಂದರೂ ನಿನ್ನ ಪ್ರಾಮಾಣಿಕತೆಗೆ ಧಕ್ಕೆ ಬರದು, ಯಾರೇನು ಹಂಗಿಸಿ, ದೂಷಿಸಿದರೂ ನಿನ್ನನು ನೀನು ಬಿಟ್ಟು ಕೊಡದೆ ತಾಳ್ಮೆಯಿಂದ ಕೇಳಿ ಇನ್ನಷ್ಟು ಸದೃಢಗೊಳ್ಳುತ್ತ ನಾನೊಬ್ಬ ಶಿಸ್ತಿನ ಸಿಪಾಯಿಯೆಂದು ಧೈರ್ಯದಲಿ ಮುನ್ನುಗ್ಗುಗುವೆ. ಆದರೆ ನೀನೆದುರಿಸುವ ಕಷ್ಟಪಾಡುಗಳೇನು!

    ಹೌದು, ನಿನ್ನ ಉದ್ಯೋಗ ನಿನ್ನ ಹೊಟ್ಟೆಪಾಡಿಗಾಗಿ, ಕನಸುಗಳನ್ನು ಹೊತ್ತು ಸದಾ ನಗುಗುತ್ತಾ ಬದುಕಲು ಹವಣಿಸುವ ನಿನಗೆ ಅಲ್ಲಿ ಇಲ್ಲಿ ಸಿಗುವ, ಪರಿಚಯವಾಗುವ, ಹೊಗಳುವ,ತೆಗಳುವ ಜನರ ನಡುವೆ ನಿನ್ನ ಬದುಕ ಬಂಡಿ ಮುನ್ನುಗ್ಗುಲು ಹರಸಾಹಸಪಡುತ್ತದೆ!

    ನೀನೊಬ್ಬ, ರೈತನಾದರೂ, ವಾಹನ ಚಾಲಕನಾದರೂ, ಅಡುಗೆಯವನಾದರೂ, ಅಧ್ಯಾಪಕನಾದರೂ, ವೈದ್ಯನಾದರೂ, ತಾಂತ್ರಿಕ ಕೆಲಸ ಮಾಡುವವನಾದರೂ, ಬ್ಯಾಂಕ್ ನೌಕರನಾದರೂ, ವಕೀಲನಾದರೂ, ಪೊಲೀಸಾದರೂ, ನ್ಯಾಯಾಧೀಶ ಅಥವಾ ಯಾವ ಹುದ್ದೆಯಲ್ಲಿದ್ದರೂ ನಿನ್ನಲ್ಲಿ ಅಹಂಕಾರದ ಮನೋಭಾವನೆ ಇದ್ದು, ಅಧಿಕಾರದ ಮದದಲ್ಲಿ ನೀನೆಂದುಕೊಂಡಂತೆ ನಡೆದುಕೊಳ್ಳುತ್ತಾ ನಿನ್ನ ಜೊತೆಯಲಿರುವ ಜನರಿಗೆ ಬೆನ್ನಹಿಂದೆ ಚೂರಿ ಹಾಕಿಬದುಕುವ ಚಾಳಿ, ನಿನಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಜನರ ಮೇಲೆ ಸವಾರಿ, ನಿನಗಾಗಿ ನಿಸ್ವಾರ್ಥ ಸೇವೆ ಮಾಡುವ ಜನರಮೇಲೂ ನಿನ್ನ ಕೆಂಗಣ್ಣು, ನಿನ್ನ ಸಂಗಡಿಗರನ್ನು ಮೋಸಮಾಡಿ ನಾಶಪಡಿಸುವ ಬುದ್ದಿ, ಇವೆಲ್ಲವೂ ಶಿಸ್ತಿನ ಜೀವನ ನಡೆಸುವ ಜೀವದ ರಕ್ತ ಹೀರುವ ನರಪಿಶಾಚಿ ನೀನಾಗಿದ್ದರೆ! ದುಷ್ಟ ಸಾಮ್ರಾಜ್ಯದ ಸರದಾರ ನೀನೇ ಆಗಿರುವೆ!

    ನೀನೇನಾದರೂ ಬೆವರು ಸುರಿಸಿ ದುಡಿದ ರೈತನ ಬೆಳೆಗೆ ಸರಿಯಾದ ಬೆಲೆ ಕೊಡದೆ ಮದ್ಯವರ್ತಿಯಾಗಿ ಕೆಲಸಮಾಡಿ, ಬಡ ರೈತನ ಅನ್ನಕ್ಕೂ ಕೈ ಹಾಕಿ ತನ್ನ ಹೆಂಡತಿಮಕ್ಕಳ ಉದ್ದಾರಕ್ಕೆ ಕೈ ಹಾಕಿದ್ದರೆ, ನಿನ್ನೊಂದಿಗೆ ಬಂದ ಪಾಪದ ಹಣ ನಿನ್ನ ಕೊನೆಗಾಲದ ಮುನ್ನ ನಿನ್ನವರ ಮುಂದೆ ಕಾಯಿಲೆ ಬಿದ್ದು ಹುಳಬಿದ್ದು ಸಾಯುವಂತಾಗಲಿ! ನಿನ್ನ ಪಾಪ ಪ್ರಾಯಶ್ಚಿತ ನೀನು ಸತ್ತಮೇಲೂ ಮುಗಿಯದಿರಲಿ!

     ನೀನೇನಾದರೂ ನಿನ್ನ ಕಾರಿನ ಚಾಲಕನಿಗೆ ವಿನಾಕಾರಣ ಹೀಯಾಳಿಸಿ ನೀನೊಬ್ಬ ಚಾಲಕನಷ್ಟೇ ನಾ ನಿನ್ನ ಮಾಲಿಕ ಎಂದು ಬೈದು ತೆಗಳುವ ಚಾಳಿ ನಿನ್ನಲಿದ್ದರೆ ನಿನ್ನ ಅದೇ ಕಾರಿನ ಹಿಂದೆ ನಿನಗಿಂತ ದೊಡ್ಡವರು ಬಂದು ನಿನ್ನ ತೆಗಳುವಂತಾಗಲಿ! ನಿನ್ನ ಐಶ್ವರ್ಯದ ಮದ ನಿಂತು ಹೋಗಲಿ!

ನೀನೇನಾದರೂ ನಿನ್ನ ಆಹಾರವನ್ನು ಸಿದ್ದಪಡಿಸುವವನಿಗೆ ಕೆಟ್ಟದಾಗಿ ಮಾತನ್ನಾಡಿ ತಿನ್ನಲು ಗಟ್ಟಿಯಿಲ್ಲದವನೇ ಎಂದು ಹಂಗಿಸುವ ಬುದ್ದಿಯಿದ್ದರೆ ನಿನ್ನ ಜೀವನದಲ್ಲಿ ಅನ್ನವೇ ಸಿಗದಂತೆ ಆಗಿ ಹೋಗಲಿ!

ನೀನೊಬ್ಬ ನ್ಯಾಯವಾದಿಯಾಗಿ, ಪೊಲೀಸನಾಗಿ, ನ್ಯಾಯದೀಶನಾಗಿ ಅವ್ಯಹಾರ ಮಾಡಿ  ಹಣ ಸಂಪಾದಿಸುವ ಬುದ್ದಿ ನಿನ್ನಲಿದ್ದರೆ ನಿನ್ನ ಜೊತೆಯಲಿರುವವರ ಕಣ್ಣು ಬಾಯಿ ಸ್ತಬ್ದವಾಗಿ,  ಗಳಿಸಿದ ಹಣ ದಿಕ್ಕು ದೆಸೆಯಿಲ್ಲದೇ ನಾಶವಾಗಿ ಹೋಗಲಿ!

ನೀನೊಬ್ಬ ವೈದ್ಯನಾಗಿ, ಸುಳ್ಳು ಔಷದ ಕೊಟ್ಟು ಜನ ಸಾಮಾನ್ಯರ ಮೋಸ ಮಾಡಿ ಸಂಪಾದಿಸಿ, ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ಕಟ್ಟಿ ದುಡ್ಡಿಗಾಗಿ ಶವಬೀಳಿಸುವ ಬುದ್ದಿ ನಿನ್ನಲಿದ್ದರೆ ನಿನ್ನ ಕಣ್ಣೆದುರಿಗೆ ನಿನ್ನದೇ ಶವ ಬಿದ್ದು ನರಳುವಂತಾಗಲಿ!

ನೀನೊಬ್ಬ ಯಾವ ಕೆಲಸವನ್ನು ಮಾಡುತಿದ್ದರೂ, ಆ ಕೆಲಸದಲ್ಲಿ ಅಸತ್ಯ, ಮೋಸ, ದಗಾ, ವಂಚನೆ, ಅಪ್ರಾಮಾಣಿಕತೆ ತುಂಬಿ ತುಳುಕುತಿದ್ದರೆ ಅದರ ಹತ್ತು ಪಟ್ಟು ಕಷ್ಟ ಕಾರ್ಪಣ್ಯಗಳ ಪಟ್ಟಿ ನಿನ್ನ ಜೀವನದಲ್ಲಾಗಲಿ,!

ಶಿಸ್ತಿನ ಸಿಪಾಯಿ ನೀನಾಗಿದ್ದರೆ! ದುಷ್ಟರ ಸಾಮ್ರಾಜ್ಯದಲ್ಲೂ ಬದುಕುವೆ! ಶಿಸ್ತಿನ ಮನುಜ ನೀನಾಗಿದ್ದರೆ ಯಾವ ಕಷ್ಟವನ್ನು ಮೀರಿ ಬದುಕಿ ಬರುವೆ, ಸತ್ಯ ಧರ್ಮ, ನ್ಯಾಯ ನೀತಿ, ಸರಿಯಾಗಿ ಪಾಲಿಸಿಕೊಂಡು ಬರುವ ಮನುಜ ನೀನಾಗಿದ್ದರೆ ನಿನ್ನ ಜೀವನದಲ್ಲಿ ಭಯವಿಲ್ಲದೆ ಬದುಕುವೆ, ನಿನ್ನ ಪ್ರಾಣ ಪಕ್ಷಿ ಹಾರುವ ಮುನ್ನ ಪ್ರಪಂಚವನ್ನೇ ಗೆದ್ದು ಬಿಡುವೆ!.

      ಜನಿಸಲಿ ಶಾಂತಿಪ್ರಿಯರು, ಜನಿಸಲಿ ಧರ್ಮಿಸ್ಟರು, ಜನಿಸಲಿ ಗುಣವಂತರು, ಜನಿಸಲಿ ಸತ್ಯವಂತರು, ಜನಿಸಲಿ ಶೂರರು, ವೀರರು, ಇನ್ನಷ್ಟು ಜನಿಸಲಿ ಭಾರತ ಮಾತೆಯ ಕಾಪಾಡುವವರು, ಈ ಪ್ರಪಂಚವ ತಾಯಿಯಂತೆ ನೋಡುವವರು.

                


            ✍️ಮಾಧವ. ಕೆ. ಅಂಜಾರು.

            













Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

ಕಿರಣವಾಗಿ